ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಪ್ರಶಸ್ತಿ ಪ್ರಕಟ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ನವ೦ಬರ್ 28 , 2014
|
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು 2012, 2013, 2014ನೇ ಸಾಲಿನ 'ಪಾರ್ತಿಸುಬ್ಬ' ಪ್ರಶಸ್ತಿಗೆ ಮತ್ತು 2013, 2014ರ ವಾರ್ಷಿಕ ಗೌರವ ಪ್ರಶಸ್ತಿಗೆ 19 ಕಲಾವಿದರು ಹಾಗೂ ಒಂದು ಸಂಸ್ಥೆಯನ್ನು ಆಯ್ಕೆ ಮಾಡಿದೆ.
|
ಡಾ. ಶಿಮಂತೂರು ನಾರಾಯಣ ಶೆಟ್ಟಿ
|
ಮಂಗಳೂರಿನ ಯಕ್ಷಗಾನ ಕಲಾವಿದ ಡಾ. ಶಿಮಂತೂರು ನಾರಾಯಣ ಶೆಟ್ಟಿ (2012), ಬೆಂಗಳೂರಿನ ಸೂತ್ರದ ಸಲಾಕೆಗೊಂಬೆ ಕಲಾವಿದ ಎಂ.ಆರ್.ರಂಗನಾಥ ರಾವ್ (2013) ಮತ್ತು ಮೈಸೂರಿನ ಯಕ್ಷಗಾನ ಸಾಹಿತಿ ಜಿ.ಎಸ್.ಭಟ್ (2014) ಅವರನ್ನು ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ ಅಕಾಡೆಮಿ ಅಧ್ಯಕ್ಷ ಬೆಳಗಲ್ಲು ವೀರಣ್ಣ ''ಪಾರ್ತಿಸುಬ್ಬ ಪ್ರಶಸ್ತಿ ತಲಾ ಒಂದು ಲಕ್ಷ ರೂ., ವಾರ್ಷಿಕ ಗೌರವ ಪ್ರಶಸ್ತಿ ತಲಾ 10 ಸಾವಿರ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ,'' ಎಂದು ತಿಳಿಸಿದರು.
''ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಾದೇಶಿಕತೆ, ಅರ್ಹತೆ ಮತ್ತು ಅನುಭವ ಪರಿಗಣಿಸಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಎಲ್ಲ ವರ್ಗದ ಕಲಾವಿದರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. 60-90 ವರ್ಷದೊಳಗಿನ ಕಲಾವಿದರನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ,'' ಎಂದು ಮಾಹಿತಿ ನೀಡಿದರು.
ಅಕಾಡೆಮಿ ಸದಸ್ಯ ಚಕ್ಕರೆ ಶಿವಶಂಕರ್ ಮಾತನಾಡಿ ''ಜಾನಪದ ರಂಗ ಕಲೆಗೆ ಸಂಬಂಧಿಸಿದ ಸಮಗ್ರ ಸಾಹಿತ್ಯ ಸಂಪುಟ ಹೊರತಲಾಗುತ್ತಿದೆ. ಪ್ರಮುಖ ಜನಪದ ಕಲಾವಿದರ ಕುರಿತು ಸಾಕ್ಷ್ಯಚಿತ್ರ ತಯಾರಿಸಲಾಗುವುದು. ಇದಕ್ಕೆ ಒಂದು ಕೋಟಿ ರೂ. ವ್ಯಯವಾಗಲಿದ್ದು, ಹೆಚ್ಚಿನ ಅನುದಾನ ಕೋರಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು,'' ಎಂದು ಹೇಳಿದರು.
|
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಬೆಳಗಲ್ಲು ವೀರಣ್ಣ
|
ಅಕಾಡೆಮಿ ಸದಸ್ಯ ಕೆ.ಎಂ.ಶೇಖರ್ ''ಕರಾವಳಿ ಭಾಗದ ಕಲೆಯನ್ನು ಉತ್ತರ ಕರ್ನಾಟಕದ ಜನತೆಗೆ ಅಲ್ಲಿಯ ಶ್ರೀಕೃಷ್ಣ ಪಾರಿಜಾತ ಕಲೆಯನ್ನು ಇಲ್ಲಿಯವರಿಗೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ಯಕ್ಷಗಾನ ಬಯಲಾಟ ರಂಗ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,'' ಎಂದು ವಿವರಿಸಿದರು.
ಅಕಾಡೆಮಿಯ ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ, ಕನ್ನಡ ವಿವಿ ಪ್ರಾಧ್ಯಾಪಕ ಗಂಗಾಧರ ದೈವಜ್ಞ ಮತ್ತಿತರರು ಉಪಸ್ಥಿತರಿದ್ದರು.
2013ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ
ಉಡುಪಿ ಜಿಲ್ಲೆಯ ಯಕ್ಷಗಾನ ತಾಳಮದ್ದಳೆ (ಬಡಗುತಿಟ್ಟು) ಕಲಾವಿದ ಮಲ್ಪೆ ವಾಸುದೇವ ಸಾಮಗ, ಯಕ್ಷಗಾನ ವಿಮರ್ಶಕ ಎಸ್.ವಿ.ಉದಯಕುಮಾರ್ ಶೆಟ್ಟಿ, ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಭಾಗವತರಾದ (ಬಡಾಬಡಗು ತಿಟ್ಟು) ಕಪ್ಪೆಗೆರೆ ಸುಬ್ರಾಯ ಭಾಗವತ, ಶಿವಮೊಗ್ಗ ಜಿಲ್ಲೆಯ ಯಕ್ಷಗಾನ ವೇಷಧಾರಿ (ಬಡಗು ತಿಟ್ಟು) ಕೊಕ್ಕಡ್ತಿ ಕೃಷ್ಣಮೂರ್ತಿ, ಯಕ್ಷಗಾನ ಹಾಸ್ಯ ಪಾತ್ರಧಾರಿ (ತೆಂಕು ತಿಟ್ಟು) ಬಂಟ್ವಾಳ ಜಯರಾಮ ಆಚಾರ್ಯ, ಬಳ್ಳಾರಿ ಜಿಲ್ಲೆಯ ಬಯಲಾಟ ಕಲಾವಿದ ಬಿ.ಎಂ.ನಿಂಬಗಲ್ಲು ರುದ್ರಯ್ಯ, ತೊಗಲುಗೊಂಬೆ ಕಲಾವಿದ ನಾರಾಯಣಪ್ಪ ಕಾರಿಗನೂರು, ತುಮಕೂರು ಜಿಲ್ಲೆಯ ಮೂಡಲಪಾಯ ಯಕ್ಷಗಾನ ಕಲಾವಿದ ಎ.ಎನ್.ಚನ್ನಬಸವಯ್ಯ, ಕಲ್ಬುರ್ಗಿ ಜಿಲ್ಲೆಯ ಬಯಲಾಟ ವೇಷಭೂಷಣ ತಯಾರಕ ಬಸವಲಿಂಗಪ್ಪ ಗುರುಬಸಪ್ಪ ವಿಭೂತೆ ಮತ್ತು ಬೆಳಗಾವಿ ಜಿಲ್ಲೆಯ ಶ್ರೀಕೃಷ್ಣ ಪಾರಿಜಾತ ಕಲಾವಿದ ಈಶ್ವರಚಂದ್ರ ಬೆಟಗೇರಿ.
|
ಯಕ್ಷಗಾನ ವಿಮರ್ಶಕ ಎಸ್.ವಿ.ಉದಯಕುಮಾರ್ ಶೆಟ್ಟಿ,
|
2014ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ
ಬೆಂಗಳೂರಿನಲ್ಲಿನ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ, ಉಡುಪಿ ಜಿಲ್ಲೆಯ ಯಕ್ಷಗಾನ ಸ್ತ್ರೀ ಪಾತ್ರಧಾರಿ (ತೆಂಕುತಿಟ್ಟು) ಉದ್ಯಾವರ ಜಯಕುಮಾರ, ಯಕ್ಷಗಾನ ಸ್ತ್ರೀ ವೇಷಧಾರಿ (ಬಡಗುತಿಟ್ಟು) ಎಂ.ಎ.ನಾಯ್ಕ್, ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದ (ಬಡಾಬಡಗುತಿಟ್ಟು) ಕೃಷ್ಣ ಭಂಡಾರಿ, ಬಾಗಲಕೋಟ ಜಿಲ್ಲೆಯ ಶ್ರೀಕೃಷ್ಣ ಪಾರಿಜಾತ ಕಲಾವಿದ ಮುದಕಪ್ಪ ಹನುಮಪ್ಪ ಹೊಸೂರ, ಹಾಸನ ಜಿಲ್ಲೆಯ ತೊಗಲುಗೊಂಬೆ ಕಲಾವಿದೆ ಸತ್ಯಕ್ಕ, ಚಿತ್ರದುರ್ಗ ಜಿಲ್ಲೆಯ ಬಯಲಾಟ ಮದ್ದಳೆಗಾರ ಸಣ್ಣಪಾಲಯ್ಯ, ಮಂಡ್ಯ ಜಿಲ್ಲೆಯ ಸೂತ್ರದಗೊಂಬೆ ಕಲಾವಿದ ನೆಲ್ಲಿಗೆರೆ ತಿಮ್ಮಪ್ಪಾಚಾರ್, ಬೆಳಗಾವಿ ಜಿಲ್ಲೆಯ ಸಣ್ಣಾಟ ಕಲಾವಿದ ಮಹದೇವಪ್ಪ ಅವರಾಧಿ ಮತ್ತು ಯಾದಗಿರಿ ಜಿಲ್ಲೆಯ ಬಯಲಾಟ ಕಲಾವಿದ ಸಣ್ಣಬಸಪ್ಪ.
ಕೃಪೆ :
http://www.vijaykarnataka.com
|
|
|